Monday 15 February 2021

ಬಾಲ್ಯ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಾಲವದು.  ಹಳ್ಳಿಗಳಲ್ಲಿ ಫ್ರಿಡ್ಜ್ , ವಾಷಿಂಗ್ ಮಷಿನ್ ಗಳ ಹಾವಳಿಯಿಲ್ಲದ ದಿನಗಳು. ನಮ್ಮ ಬಾಲ್ಯದ ದಿನಗಳವು. ಅಷ್ಟೇ ಏಕೆ ಕೆಲವೊಮ್ಮೆ ಸರಿಯಾಗಿ ಎಲೆಟ್ರಿಸಿಟಿ ಕೂಡ ಇಲ್ಲದೆ ಸಣ್ಣ ದೀಪದಲ್ಲಿ ರಾತ್ರಿ ಕಳೆಯುವುದೋ ಅಥವಾ ಹೋಂ ವರ್ಕ್ ಮುಗಿಸುವುದೋ ಮಾಡಿದಂತ ಕಾಲ ಅದಾಗಿತ್ತು. ರಾತ್ರಿ ಸರಿಯಾಗಿ ಊಟದ ಸಮಯಕ್ಕೆ ಮಾಡುತ್ತಿದ್ದ ಪವರ್ ಕಟ್. ಅದಕ್ಕಾಗಿ ಅಮ್ಮ ಬೈಯುತ್ತಾ ಹೊರ ತೆಗೆಯುತ್ತಿದ್ದ ಲಾಟೀನು. ಆಗ ಅದೇ ನಮಗೆ ಕ್ಯಾಂಡಲ್ ಲೈಟ್ ಡಿನ್ನರ್. ನಗು ಹರಟೆ ಅದೆಲ್ಲ ಈಗ ಒಂದು ನೆನಪು ಮಾತ್ರ. ಈಗ ಪ್ರತಿ ಮನೆಯಲ್ಲೂ ಇಂವೋರ್ಟರ್ ಬಂದು ಸದಾ ಕಾಲ ಟಿವಿ . ಹಾಗೆಯೇ ಬೆಳಕಿನ ಜಗಮಗ.

ಅದು ತೊಂಬತ್ತರ ದಶಕ . ಆಗೆಲ್ಲ ಹಳ್ಳಿ ಮನೆಗಳಲ್ಲಿ ಒಟ್ಟು ಕುಟುಂಬ . ಮನೆಯಲ್ಲಿ ಕನಿಷ್ಠ ಹದಿನೈದು ಇಪ್ಪತ್ತು ಜನರಿರುತ್ತಿದ್ದರು. ನಾವು ಚಿಕ್ಕವರಿರುವಾಗ ಹಳ್ಳಿಗಳಲ್ಲಿನ್ನೂ ಫ್ರಿಡ್ಜ್ ಬಂದಿರಲಿಲ್ಲ. ಮನೆಯಿಂದ ಪ್ರತಿದಿನ ತರಕಾರಿ ತರಲು ದೂರದ ಪೇಟೆಗೆ ಹೋಗುವುದೂ ಬಹಳ ಅಪರೂಪವಾಗಿತ್ತು. ಹಾಗೊಮ್ಮೆ ಪೇಟೆಗೆ ಹೋದಾಗ ತರುವ ತರಕಾರಿ ಹದಿನೈದು ಇಪ್ಪತ್ತು ಮಂದಿ ಇರುವ ಮನೆಯಲ್ಲಿ ಒಮ್ಮೆ ಸಾಂಬಾರು ಮಾಡಿದರೆ ಖಾಲಿ ಆಗಿಬಿಡುತ್ತಿತ್ತು. ಅದಕ್ಕಾಗಿಯೇ ಮನೆಯ ಹಿತ್ತಲಲ್ಲೇ ಸಾಕಷ್ಟು ತರಕಾರಿಗಳು ಆ ಕಾಲಮಾನಕ್ಕೆ ಸರಿಯಾಗಿ ಬೆಳೆಯಲಾಗುತ್ತಿತ್ತು.ಮಳೆಗಾಲ ಮುಗಿಯುತ್ತಿದ್ದಂತೇ ಚಪ್ಪರದವರೆ, ಸೌತೆಕಾಯಿ , ಹಾಗಲಕಾಯಿ , ಬೆಂಡೆ ಕಾಯಿ , ಚೀನೀ ಕಾಯಿ ಹೀಗೆ ಚಪ್ಪರ ಹಾಕಿ ಎಲ್ಲ ಬಳ್ಳಿ ಹಬ್ಬಿಸಿ ಕಾಯಿ ಬೆಳೆಸಿ ಅದನ್ನೇ ಬಳಸಿ ಪ್ರತಿದಿನ ರುಚಿರುಚಿಯಾದ ಖಾದ್ಯ ತಯಾರಾಗುತ್ತಿತ್ತು. ಇನ್ನು ಏನೂ ಇಲ್ಲದಿದ್ದರೂ ಸದಾಕಾಲ ತೋಟದ ತೆಂಗಿನ ಮರದಲ್ಲಿ ಮನೆಗೆ ಸಾಕಾಗುವಷ್ಟು ತೆಂಗಿನ ಕಾಯಿ ಹಾಗೆಯೇ  ಮನೆಯ ಎದುರು ಹರಿವೆ ಸೊಪ್ಪು , ಎಲವರಿಗೆ ಸೊಪ್ಪು , ಕಾಕಿ ಸೊಪ್ಪು , ಚಕ್ರಮುನಿ ಸೊಪ್ಪು , ದಂಟಿನಸೊಪ್ಪು ,ಒಂದೆಲಗ (ಬ್ರಾಹ್ಮೀ ) ಉತ್ತರಣೆ ಹೀಗೆ ಸಾಕು ಬೇಕೆನ್ನುವಷ್ಟು ಸೊಪ್ಪುಗಳಂತೂ ದಿನಕ್ಕೊಂದು ಇರುತ್ತಿತ್ತು. ಯಾವುದೇ ರೀತಿಯ ಔಷಧಿ ಸಿಂಪಡಿಸದ ಸಾವಯುವ ಸೊಪ್ಪು ತರಕಾರಿಗಳನ್ನು ತಿನ್ನುತ್ತಿದ್ದ ನಾವೇ ಅದೃಷ್ಟವಂತರು ಎಂಬುದು ಈಗ ತಿಳಿಯುತ್ತಿದೆ. 
ಹಾಗೆ ಕೆಲವೊಮ್ಮೆ ಎಲ್ಲಾ ತರಕಾರಿಗಳು ಒಂದೇ ಬಾರಿ ಬೆಳೆದಾಗ ಬೇಗ ಹಾಳಾಗುವ ಅಂದರೆ ಹೆಚ್ಚು ದಿನ ಇಡಲಾಗದ ತರಕಾರಿಗಳನ್ನು ಮೊದಲು ಅಡುಗೆಗೆ ಉಪಯೋಗಿಸಿ ಇಳಿದವನ್ನೆಲ್ಲ ಶೇಖರಿಸಿಡುತ್ತಿದ್ದರು.ಬೀಟ್ರೂಟ್ ಮತ್ತು ಆಲೂಗಡ್ಡೆಯನ್ನು ಮರಳಿನಲ್ಲಿ ಹುದುಗಿಸಿ ಇಡಲಾಗುತ್ತಿತ್ತು ಹಾಗೆ ಮರಳಿನ ಅಡಿಯಲ್ಲಿಟ್ಟ ಗಡ್ಡೆಗಳು ತಿಂಗಳು ಕಳೆದರೂ ಹಾಳಾಗದೇ ಇರುತ್ತಿದ್ದವು ಮತ್ತು ಬೇಕಾದಾಗ ಬೇಕಾದಷ್ಟನ್ನೇ ಹುಡುಕಿ ತಂದು ಅಡುಗೆ ಮಾಡಬಹುದಿತ್ತು . ಗಡ್ಡೆಗಳನ್ನು ಕೊಳೆಯದಂತೆ ಫ್ರಿಡ್ಜ್ ನಂತೆಯೇ ಅದು ಕಾಪಾಡುತ್ತಿತ್ತು. ಜೊತೆಗೆ ಮನೆಯಲ್ಲಿಯೇ ಬೆಳೆದ ಎಲೆ ಅಡಿಕೆಗೆ ಬಳಸುವ ಎಲೆ ಮತ್ತು ನಿಂಬೆಹಣ್ಣುಗಳನ್ನು ಬಟ್ಟೆಯಲ್ಲಿ ಕಟ್ಟಿ ಬಾವಿಯಲ್ಲಿ ನೇತು ಹಾಕುತ್ತಿದ್ದರು. ಅದು ಕೂಡ ತಣ್ಣಗೆ ಫ್ರಿಡ್ಜ್ ನಂತೆಯೇ ಇರುತ್ತಿದ್ದ ನೀರಿರುವ ಬಾವಿಯಲ್ಲಿ ತಿಂಗಳುಗಳವರೆಗೆ ಕೆಡದೇ ಉಳಿಯುತ್ತಿತ್ತು ಮತ್ತು ತಾಜಾವಾಗಿಯೂ ಇರುತ್ತಿತ್ತು.
ಈಗ ಹಳ್ಳಿ ಮನೆಗಳಲ್ಲಿಯೂ ಫ್ರಿಡ್ಜ್ , ಟಿವಿ , ಇಂವೊರ್ಟರ್ , ಫ್ಯಾನ್ , ಕಾರು  ಅದಿಲ್ಲದಿದ್ದರೆ ಬೈಕ್ ಪ್ರತಿಯೊಬ್ಬರ ಮನೆಯಲ್ಲಿಯೂ ಇದೆ ಮತ್ತು ತರಕಾರಿಗಳನ್ನು ಪೇಟೆಗೆ ಹೋಗಿ ತಂದು ವಾರಗಟ್ಟಲೆ ಫ್ರಿಡ್ಜ್ ನಲ್ಲಿರಿಸಿ ಬಳಸುತ್ತಿದ್ದಾರೆ.  ಕಾಲ ಬದಲಾದಂತೆ ಅವಕಾಶಗಳು ಹೆಚ್ಚಿದಂತೆ ಅನುಕೂಲಗಳೂ ಬದಲಾಗುತ್ತಾ ಬರುತ್ತಿದೆ .
Arpitha RaoBanbury

Thursday 11 February 2021

ಮಗುವಿಗೊಂದು ಪುಸ್ತಕ



Published in Kannadapress 11/2/21  https://www.kannadapress.com/2021/02/11/how-to-attract-children-towards-book-reading/


ನನ್ನ ಎರಡು ವರ್ಷದ ಪುಟ್ಟ ಮಗ ಕೈಯಲ್ಲೊಂದು ಪುಸ್ತಕ ಹಿಡಿದು ಎಲ್ಲೋ ಪರೀಕ್ಷೆ ಹತ್ತಿರ ಬರುತ್ತಿರುವ ಮಕ್ಕಳು ಓದುತ್ತಿರುವಂತೆ ನಟಿಸುವುದನ್ನು ನೋಡುವುದೇ ಒಂದು ಖುಷಿ.  ಸಮಯ ಸಿಕ್ಕಾಗೆಲ್ಲ ಪುಸ್ತಕ ತಿರುವಿ ಹಾಕುವ ಇಲ್ಲವೇ ತನಗೆ ಬರುವ ಪದ್ಯಗಳನ್ನು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮಾಡಿ , ಹಾಡಿ ತೋರಿಸುವ ಪರಿ ಮನಸ್ಸಿಗೆ ಮುದ ಕೊಡುತ್ತದೆ.ಇಂದಿನ ಮಕ್ಕಳು ದಿನವಿಡೀ ಗೆಜೆಟ್ ಕೊಟ್ಟರೂ ಹಿಡಿದು ಕುಳಿತುಬಿಡುವುದನ್ನು ನೋಡಿದರೆ ಎಂತಹ  ಪೋಷಕರಿಗೂ ಖೇದ ಎನಿಸದಿರದು.

ನಮ್ಮ ಮಕ್ಕಳೂ ಕಥೆ ಓದಬೇಕು , ಸಾಹಿತ್ಯ  ತಿಳಿಯಬೇಕು ನಮ್ಮಂತೆಯೇ ಗಿಡಮರ ಮಣ್ಣುಗಳ  ಮಧ್ಯೆ ಬೆಳೆಯಬೇಕು ಎಂಬುದು ಎಲ್ಲರ ಆಕಾಂಕ್ಷೆ.  ಮಲೆನಾಡಿನ ಹಳ್ಳಿಯ ಹಸಿರುಗಾಡಿನ ಮಧ್ಯೆ ಹುಟ್ಟಿ ಬೆಳೆದ ನನಗೆ ನನ್ನ ಮಗ ಲಂಡನ್ ನ ಸಿಟಿಯಲ್ಲಿ ಬೆಳೆದರೆ ಏನೋ ಕಳೆದುಕೊಳ್ಳುವನೇನೋ ಎಂಬ ಆತಂಕ ಸದಾ  ಕಾಡುತ್ತಿತ್ತು.  ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣವೆಂದರೆ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು . 

ಇಲ್ಲಿನ ಪೋಷಕರಿಗೆ ಹಿರಿಯರ ನೆರವಿರುವುದಿಲ್ಲ ನಿಜ  , ಏನಾದರೂ ಆದರೆ ಮನೆಮದ್ದು ಮಾಡಲು, ಮಕ್ಕಳನ್ನು ಸಂತೈಸಲು  ಕೂಡ ಗೊತ್ತಿರದ ಯುವ ಪೋಷಕರ ಆತಂಕವನ್ನು ಕಡಿಮೆ ಮಾಡಲೆಂದೇ ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳು ವಿಶೇಷ ಕಾಳಜಿ ತೆಗೆದುಕೊಂಡು ,  ವಿವಿದ ರೀತಿಯ ತರಗತಿಗಳನ್ನು ಪ್ರತಿದಿನ ಇಟ್ಟಿರುತ್ತಾರೆ. 
ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳನ್ನು ಬುದ್ದಿವಂತರನ್ನಾಗಿ  ಮಾಡಬೇಕು ಎಂಬ ಆಸೆ ಇರುತ್ತದೆ. ಮಕ್ಕಳಲ್ಲಿ ಓದುವ ಗೀಳನ್ನು ಹಚ್ಚಬೇಕು ಹಾಗೆ ಮಾಡಿದಲ್ಲಿ ಅವರಿಗೆ ತರಗತಿಯಲ್ಲಿ ಕೂಡ ಏಕಾಗ್ರತೆ ಹೆಚ್ಚಲು ಮತ್ತು ಆಸಕ್ತಿ ಹೊಂದಲು ಸಹಕಾರಿಯಾಗುತ್ತದೆ ಎಂಬುದು ಇಲ್ಲಿನ ಮಕ್ಕಳ ತಜ್ಞರ ಅಂಬೋಣ . ಮಕ್ಕಳು ಗೆಜೆಟ್ ಗಳನ್ನು ಹೆಚ್ಚು ಹೆಚ್ಚು ಬಳಸಿದಂತೆಲ್ಲ ಅವರ ಅರೋಗ್ಯ ಕೂಡ ಹದಗೆಡುತ್ತದೆ , ಕಣ್ಣಿನ ತೊಂದರೆ ಬರುತ್ತದೆ ,ಕುಳಿತಲ್ಲಿಂದ ಏಳದೆ ಬೊಜ್ಜು ಕೂಡ ಬರಬಹುದು. ಹಾಗೆಯೇ ಇಡೀ ದಿನ ಮಕ್ಕಳ ಮನಸ್ಸಿನಲ್ಲಿ ಗೇಮ್ಸ್ ತಲೆಯಲ್ಲಿ ಓದುವುದರಿಂದ ಓದಿನ ಬಗ್ಗೆ ಶಾಲೆಯೆಲ್ಲಿ ಮಾಡುವ ಪಾಠದ ಬಗ್ಗೆ ಯಾವುದೇ ರೀತಿಯ ಇಚ್ಛೆ ತೋರಿಸಲಾರರು . 

ಅಷ್ಟೇ ಅಲ್ಲ ಮಕ್ಕಳು ಮನೆ ಬಿಟ್ಟು ಹೊರಹೋಗಲು ಕೂಡ ಚಿಂತಿಸುತ್ತಾರೆ . ಹಿಂದೆ ಮಕ್ಕಳು ಹೊರಹೋಗಲು ಕಾದು ಕುಳಿತಿರುತ್ತಿದ್ದರು , ಪರಿಚಯವಿಲ್ಲದ ಕಡೆಗಳಿಗೆ ಹೋದರೂ ಅಲ್ಲಿ ಸಿಕ್ಕ ಇತರ ಮಕ್ಕಳೊಂದಿಗೆ ಗೆಳೆತನ ಮಾಡಿಕೊಳ್ಳುತ್ತಿದ್ದರು . ಈ ರೀತಿಯಾಗಿ ಸಾಮಾಜಿಕವಾಗಿ ಬೆರೆಯುತ್ತಿದ್ದರು . ಆದರೆ ಈಗಿನ ಮಕ್ಕಳಿಗೆ  ನೆಂಟರಿಶ್ಟರ ಮದುವೆ , ಮುಂಜಿಗಳಿಗೆ ಹೋದರೆ ಅಲ್ಲಿ ಆಟವಾಡಲು ಮೊಬೈಲ್ ಬೇಕು , ಹೆಚ್ಚಿನ ಮಕ್ಕಳು ಹೊರಗೆ ಕರೆದುಕೊಂಡು ಹೋದರೆ ಮಂಕಾಗಿ ಕುಳಿತುಕೊಳ್ಳುವುದು ಕಂಡುಬರುತ್ತದೆ.    ಮಕ್ಕಳು ಗೆಜೆಟ್ ಗಳ  ಮೊರೆ ಹೋಗಿ ದಿನವಿಡೀ ಅದರೊಂದಿಗೆ ಕಳೆಯುವುದನ್ನು ನೋಡಿದರೆ ಖೇದವೆನಿಸುತ್ತದೆ.

ನಮ್ಮ ಕಾಲದಲ್ಲಿ ಗೆಜೆಟ್ ಇಲ್ಲದೇ ನಾವೆಲ್ಲಾ ಮಣ್ಣು , ಗಿಡಮರಗಳ ನಡುವೆ ಆಡುತ್ತಾ ಬೆಳೆದಿರುವುದು ಅದೃಷ್ಟ ಎನ್ನಬಹುದು. ಹಾಗಾದರೆ ಈಗಿನ ಮಕ್ಕಳು ಹೀಗೆ ಗೆಜೆಟ್ ಹಿಡಿದು ಕೂರುವುದನ್ನು ತಡೆಯಲು ಸಾಧ್ಯವಿಲ್ಲವೇ ? ಖಂಡಿತ ಸಾಧ್ಯ.  ಇದನ್ನು ಪೋಷಕರಾದ ನಾವೇ ಮನೆಯಿಂದಲೇ  ಪ್ರಾರಂಭಿಸಬೇಕು.  ಇದಕ್ಕಾಗಿ ಮಕ್ಕಳ ಜೊತೆ ಕಳೆಯಲು ಸಮಯ ನಿಗದಿ ಪಡಿಸಿಕೊಳ್ಳುವುದು ಅಷ್ಟೇ ಅವಶ್ಯಕ. ಲಂಡನ್ ನ ಪ್ರತಿ ಚಿಲ್ಡ್ರನ್ ಸೆಂಟರ್ ಗಳು ಇದಕ್ಕಾಗಿ ವಿವಿಧ ತರಗತಿಗಳನ್ನು ಮಾಡುತ್ತಿವೆ. ಮಗು ಮೂರು ತಿಂಗಳು ಇರುವಾಗಲೇ ಅವಕ್ಕೆ ಪುಸ್ತಕವನ್ನು ತೋರಿಸಲು ಪ್ರಾರಂಭಿಸಿದರೆ ಅವಕ್ಕೆ ಪುಸ್ತಕ ಪ್ರೀತಿ ಹುಟ್ಟುತ್ತದೆ ಎಂಬುದು ಸಂಶೋಧಕರು ಕಂಡುಕೊಂಡ ಸತ್ಯ. ಮೊದಮೊದಲು ಪುಸ್ತಕವನ್ನು ಬಾಯಿಗೆ ಇಡಬಹದು, ಕಾಲ ಕಳೆದಂತೆ ಅದರ ಪುಟವನ್ನು ತಿರುಗಿಸಿ ಅದರೊಂದಿಗೆ ಆಡಲು ಪ್ರಾರಂಭಿಸುವ ಮಗು ಕ್ರಮೇಣ ಪುಸ್ತಕದಲ್ಲಿರುವ ಚಿತ್ರಗಳ ಮೇಲೆ ತನ್ನ ಗಮನವನ್ನು ಹರಿಸುತ್ತದೆ. ಒಂದೇ ಪುಸ್ತಕವನ್ನು ಮತ್ತೆ ಮತ್ತೆ ತೋರಿಸಿ ಅದರಲ್ಲಿರುವ ಕಥೆ ಓದಲು ಪ್ರಾರಂಭಿಸಿದರೆ ಅಥವಾ ಅದರಲ್ಲಿರುವ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿದರೆ  ಮಗು ಅದರಲ್ಲಿ ಕುತೂಹಲ ಹೊಂದುವುದು ಮಾತ್ರವಲ್ಲ ಅದರ ಶಬ್ದಕೋಶ ಕೂಡ ಬೆಳೆಯುತ್ತಾ ಹೋಗುತ್ತದೆ. ದಿನದಲ್ಲಿ ಕೇವಲ ಅರ್ಧ ತಾಸಿನಷ್ಟು ಕಥೆ ಓದುವ ದಿನಚರಿ ಇಟ್ಟುಕೊಂಡರೆ ಮಗು ಒಂದು ವರ್ಷವಾಗುವಷ್ಟರಲ್ಲಿ ಸಾಕಷ್ಟು ವಸ್ತುಗಳನ್ನು ಗುರುತಿಸುತ್ತದೆ . ತೊದಲು ನುಡಿ ನುಡಿಯಲು ಕಲಿಯುತ್ತದೆ. ರೈಮ್ಸ್ ಗಳನ್ನು ಅಥವಾ ಕಥೆಗಳನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಂಡ ಮಗು ಇತರ ಮಕ್ಕಳಿಗಿಂದ ಬೇಗ ಮಾತನಾಡುವುದನ್ನು ಕಲಿಯುವುದನ್ನು ಗಮನಿಸಬಹುದು. 

ಮಕ್ಕಳ ಬುದ್ದಿ ವಿಕಾಸಕ್ಕೆ ಅವರು ಮಾಡುವ ಕೆಲಸದಲ್ಲಿ ಅಥವಾ ಆಟದಲ್ಲೇ ಇರಲಿ ಏಕಾಗ್ರತೆ ಹೆಚ್ಚಿಸಲು ಮಗುವಾಗಿರುವಾಗಲೇ ಕಥೆ ಓದುವುದು , ರೈಮ್ಸ್ ಹೇಳುವುದು ಈ ರೀತಿ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಟ್ಟಲ್ಲಿ ಬಹಳಷ್ಟು ಉಪಯೋಗವಾಗುತ್ತದೆ ಎಂದು ತಜ್ಞರು ಕೂಡ ಹೇಳುತ್ತಾರೆ.

ಒಟ್ಟಾರೆಯಾಗಿ ಕಲಿಕೆಯಲ್ಲಿ ಒಂದು ಮಗು ಮುಂದುವರೆಯಬೇಕು ಎಂದಲ್ಲಿ ಪುಸ್ತಕ ಪ್ರೀತಿ ಒರೆ ಹಚ್ಚುವುದು ಅಷ್ಟೇ ಅವಶ್ಯಕ. ಇಲ್ಲಿನ ಚಿಲ್ಡ್ರನ್ ಸೆಂಟರ್ ಗಳಲ್ಲಿ ಹೇಳುವ ಪ್ರಕಾರ ಮಕ್ಕಳಿಗೆ ಊಟ ತಿಂಡಿ ಮಾಡುವಾಗ ಟಿವಿ ಹಾಕಿಯೋ ಅಥವಾ ಮೊಬೈಲ್ ನಲ್ಲಿ ಸಾಕಷ್ಟು ಹಾಡುಗಳನ್ನು ಹಾಕಿಯೋ ತಿನಿಸುವುದು ಪೋಷಕರು ಮಾಡುತ್ ದೊಡ್ಡ ತಪ್ಪು , ಹಿಂದೆ ಈ ರೀತಿ ಮಾಡದೆ ಚಂದಮಾಮ ತೋರಿಸಿ ಅಥವಾ ಮರಗಿಡ ಇತರ ಪ್ರಾಣಿಗಳನ್ನು ತೋರಿಸಿ ಅಥವಾ ಕಟ್ಟು ಕಥೆ ಹೇಳಿ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು ಇದರಿಂದ ಮಕ್ಕಳ ಯೋಚನಾ ಶಕ್ತಿ ಹೆಚ್ಚಿ ಮಕ್ಕಳು ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುತ್ತದೆ. 

ಹೌದು ಪೋಷಕರೇ ನಮ್ಮ ಮಕ್ಕಳು ಕಲಿಕೆಯಲ್ಲಿ ಮುಂದಿರಬೇಕು , ಬುದ್ದಿವಂತರಾಗಬೇಕು ಎಂದಿದ್ದಲ್ಲಿ  ಮಗುವಾಗಿರುವಾಗಿನಿಂದಲೇ ಎಚ್ಚೆತ್ತುಕೊಳ್ಳಕೊಳ್ಳೋಣ . ಅವರೊಡನೆ ಬೆರೆತು ಮಕ್ಕಳೊಡನೆ ಕುಳಿತು , ಟಿವಿ , ಮೊಬೈಲ್ , ಟ್ಯಾಬ್ಲೆಟ್ ಗಳನ್ನು ದೂರವಿಟ್ಟು ಮಗುವಿನಿನೊಡನೆ ಮಗುವಾಗಿ ಬೆರೆತುಬಿಡೋಣ. ಮಕ್ಕಳೊಡನೆ ಕಳೆಯುವ ಸಮಯ ನಮ್ಮ ಆರೋಗ್ಯವನ್ನು ಉಲ್ಲಸಿತವಾಗಿಡುವುದರಲ್ಲಿ ಅನುಮಾನವಿಲ್ಲ. ಇಂದೇ ಹೋಗಿ ನಿಮ್ಮ ಮಗುವಿಗೆ ಪುಸ್ತಕ ತಂದು ಕೊಡಿ , ಒಂದು ಪುಸ್ತಕ ನಿಮ್ಮ ಮಗುವಿನ ಬದುಕನ್ನೇ ಬದಲಿಸಬಹುದು. 

ಅರ್ಪಿತಾ ರಾವ್


Tuesday 2 February 2021

ಆಪದ್ಭಾಂದವ

 Published in kannada press

 https://www.kannadapress.com/2021/02/02/travel-memories-by-arpita-rao/

ಕೆಲವೊಮ್ಮೆ ದೇವರು ಬಂದಂತೆ ಬಂದು ಕಾಪಾಡಿದ ಎಂಬ ಮಾತಿದೆಯಲ್ಲ . ಅಂತಹ ಅನುಭವ ನಿಮಗಾಗಿದೆಯೇ ? ಅದೂ ಹೆಸರು ಹೇಳಲೂ ಬರದಂತ ದೇಶದಲ್ಲಿ ಹೋಗಿ ಸಿಕ್ಕಿಕೊಂಡಾಗ ಇಂತಹದೊಂದು ಅನುಭವ ಎಂದರೆ ನಿಜಕ್ಕೂ ಅದ್ಬುತ ಅನುಭವವೇ ಸರಿ .

 

ಈಗ ಮೂರು  ವರ್ಷದ ಹಿಂದಿನ ಕಾಲ . ಆಗ ಹೀಗೆಲ್ಲ ಕರೋನ ಎಂಬ ಭಯವಿರಲಿಲ್ಲ . ಸಿಕ್ಕ ಸಿಕ್ಕವರನ್ನೆಲ್ಲ ಮಾತನಾಡಿಸಬಹುದಿತ್ತು . ಅದಲ್ಲದಿದ್ದರೆ ಕೊನೆಪಕ್ಷ ಒಂದು ನಗು ಆದರೂ ಕಾಣಿಸುತಿತ್ತು . ಈಗ ಹಾಗಿಲ್ಲ ಹೊರಗೆ ಹೋಗುವಂತಿಲ್ಲ . ಹೋದರೂ ಯಾರನೂ ಮಾತನಾಡಿಸುವಂತಿಲ್ಲ . ಟ್ರಿಪ್ ಹೋಗಬೇಕೆಂದರೆ ಮಾಸ್ಕ ನಿಂದ ಹಿಡಿದು ಎಲ್ಲವನ್ನೂ ಹಾಕಿಕೊಂಡು ಹೋಗಬೇಕು .

 

ಹೀಗೆ ಮೂರು  ವರ್ಷದ ಹಿಂದೆ ಕೆನರಿ ಐಲ್ಯಾನ್ಡ್ ಎಂಬಲ್ಲಿಗೆ ಪ್ರವಾಸ ಹೋಗಿದ್ದೆವು . ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋದಾಗ ಪ್ರವಾಸದ ಮಜಾದ ಜೊತೆಗೆ ಕೆಲವೊಮ್ಮೆ ಪಜೀತಿ ಆಗುವುದೂ ಕೂಡ ಉಂಟು . ಹಾಗೆ ಸುತ್ತಲು ಹೋದಾಗ ಕೈಯಲ್ಲಿದ್ದ ಮಗನಿಗಿನ್ನೂ ಎರಡು ವರ್ಷವಾಗಿತ್ತು . ಬೆಳಗ್ಗೆ ಸುಮಾರು ಹತ್ತುಗಂಟೆಗೆಲ್ಲ ನಾವಿದ್ದ ಕಾಟೇಜ್ ನಿಂದ ಹೊರಟು ಸುತ್ತಲಿನ ಪ್ರವಾಸಿ ತಾಣಗಳನ್ನು ನೋಡಲು ಹೊರಟೆವು . ನಾವಿದ್ದ ಕಾಟೇಜಿನಿಂದ ಸುಮಾರು ನಾಲ್ಕು ತಾಸು ಪ್ರಯಾಣ ಮಾಡಿ ಅಲ್ಲಿನ ಬೀಚ್ ಮತ್ತಿತರ ತಾಣಗಳನ್ನು ನೋಡಿ ಬಸ್ ನಲ್ಲಿ ಹಿಂತಿರುಗುತ್ತಿದ್ದೆವು. ಇನ್ನೂ ಸಂಜೆಯ ನಾಲ್ಕು ಗಂಟೆಯಾಗಿದ್ದರಿಂದ ಅಲ್ಲೇ ಇರುವ ಪಾಪಾಸು ಕಳ್ಳಿಯ ಗಾರ್ಡನ್ ನೋಡಿಕೊಂಡು ಹೋಗಬಹುದು ಎಂದು ಒಂದು ಹೆಸರು ಗೊತ್ತಿಲ್ಲದ ಕಡೆ ಇಳಿದುಕೊಂಡು ಹೋಗಿ ನೋಡಿದರೆ ಗಾರ್ಡನ್ ಕ್ಲೋಸ್ ಆಗಿತ್ತು . ಅಲ್ಲೇ ಸುತ್ತಲೂ ತಿರುಗಿ ಹೇಗೆ ಒಂದು ಗಂಟೆ ಕಳೆದವು . ನಂತರ ಬಸ್ಸನ್ನು ಹತ್ತಿ ಮತ್ತೆ ನಾವಿರುವಲ್ಲಿಗೆ ಹೋಗೋಣ ಎಂದು ಬಸ್ ಗಾಗಿ ಕಾಯುತ್ತಾ ನಿಂತೆವು . ಹಾಗೆ ನಾವು ನಿಂತು ಸುಮಾರು ಒಂದು ತಾಸಾಯಿತು ಕತ್ತಲೂ ಆವರಿಸುತ್ತಲೇ ಇತ್ತು . ಕತ್ತಲಾಗುತ್ತಿದ್ದಂತೆ ತಣ್ಣಗೆ ಕೊರೆಯುವ ಚಳಿ . ತಡೆಯಲಾಗದಂತೆ ನಡುಗುತ್ತ ಬಸ್ಸಿಗಾಗಿ ಕಾಯುತ್ತಾ ಬೇಸತ್ತಿದ್ದೆವು . ಹತ್ತಿರದಲ್ಲೆಲ್ಲಾದರೂ ಕ್ಯಾಬ್ ಸಿಗಬಹುದೇನೋ ಎಂದು ಕೇಳೋಣವೆಂದರೆ ಯಾರಿಗೂ ಇಂಗ್ಲಿಷ್ ಬರುತ್ತಿರಲಿಲ್ಲ . ಸ್ಪ್ಯಾನಿಷ್ ಭಾಷೆಯ ಒಂದೆರಡು ಶಬ್ದ ಬಿಟ್ಟರೆ ನಮಗೆ ಬೇರೆ ಸಂವಹನೆ ಗೊತ್ತಿರಲಿಲ್ಲ .  ಹಾಗೆ ಬೀಸುತ್ತಿದ್ದ ತಣ್ಣನೆಯ ಕೊರೆಯುವ ಚಳಿಗೆ ಮಗನಿಗೆ ಮೈ ಸುಡಲು ಪ್ರಾರಂಭವಾಗಿತ್ತು . ಒಂದೇ ಸಮನೆ ಅಳಲು ಪ್ರಾರಂಭಿಸಿದ್ದ . ನಮ್ಮ ಹತ್ತಿರ ಕೈಯಲ್ಲಿ ಹೊಚ್ಚಲು ಒಂದು ಹೊದಿಕೆ ಅಥವಾ ಸ್ವೇಟರ್ ಏನೂ ಇಲ್ಲದ ಪರಿಸ್ಥಿತಿ .

 

ಹಾಗೆ ಕ್ಯಾಬ್ ಕೂಡ ಇಲ್ಲದೆ ಕಾಯುತ್ತಾ ಕುಳಿತುಕೊಳ್ಳಲು ಸ್ಥಳವೂ ಇಲ್ಲದ ಪರಿಸ್ಥಿತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿಗೊಂದು ಅಜ್ಜಿ ಬಂದರು . ಆಕೆಗೆ ಏನಿಲ್ಲವೆಂದರೂ ಎಪ್ಪತ್ತರ ಮೇಲೆ ವಯಸಾಗಿತ್ತು. ನಮ್ಮಂತೆ ಇನ್ನೂ ಎರೆಡು ಮೂರೂ  ಜನ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು . ಆ ಅಜ್ಜಿ ಅಲ್ಲಿ ಬಂದವರೇ ನಮ್ಮ ಪರದಾಟ ನೋಡಿ ತಮ್ಮ ಕೈಯಲ್ಲಿದ್ದ ಶಾಲ್ ಒಂದನ್ನು ತೆಗೆದು ಬೇಡವೆಂದರೂ ಕೇಳದೆ ಮಗನಿಗೆ ಹೊಚ್ಚಿಸಿಕೊಳ್ಳಲು ಕೊಟ್ಟರು . ಹಾಗೆಯೇ ಬಸ್ ನಿಲ್ದಾಣದ ಹಿಂದೆಯೇ ಇದ್ದ ಪಾಪಾಸು ಕಳ್ಳಿಗಳ ಗಿಡಗಳ ನಡುವೆ ನಿಲ್ಲುವಂತೆಯೂ ಹಾಗೆ ನಿಂತಲ್ಲಿ ಸ್ವಲ್ಪ ಬೆಚ್ಚಗಾಗುತ್ತದೆ ಎಂದು ತಮ್ಮ ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿ, ನಿಂತು ಹೀಗೆ ಇಲ್ಲಿ ಬನ್ನಿ ಎಂದು ತೋರಿಸಿದರು . ಅವರು ಹೇಳಿದಂತೆ ಹೋಗಿ ನಿಂತಾಗ ಕೊರೆಯುವ ಚಳಿ ಮೈಗೆ ಅಟ್ಟುವುದು ತಪ್ಪಿತು . ಹೀಗೆ ಆಪದ್ಭಾಂದವರಂತೆ ಆ ದಿನ ಬಂದು ನಮಗೆ ಸಹಾಯ ಮಾಡಿದ ಆ ಅಜ್ಜಿ ಭಾಷೆಯ ಕೊರತೆಯ ನಡುವೆಯೂ ನಮಗೆ ದೇವರಂತೆ ಕಂಡಿದ್ದು ನಿಜ . ಹಾಗೆ ಕಾಯುತ್ತಾ ಸುಮಾರು ನಾಲ್ಕು ತಾಸಿನ ನಂತರ ಬಸ್ ಬಂತು . ನಾವು ಕಾಟೇಜ್ ಸೇರಿದೆವು ಎಂಬುದನ್ನು ಮರೆಯಲೂ ಸಾಧ್ಯವಿಲ್ಲ . ನಾವು ಬಂದ ಬಸ್ಸಿಗೆ ನಮ್ಮೊಡನೆ ಬಂದ ಅಜ್ಜಿ ಹಸನ್ಮುಖಿಯಾಗಿ ನಮ್ಮ ಮುಂದಿನ ಪ್ರಯಾಣ ಶುಭಕರವಾಗಿರಲೆಂದು ಕೈ ಮಾಡಿ ಹೇಳಿದರು . ಭಾಷೆ ಗೊತ್ತಿಲ್ಲದಿದ್ದರೂ ಅವರು ಹೇಳಿದ ರೀತಿಯಿಂದ ಅವರ ಹಾರೈಕೆಯ ಅರಿವಾಗಿತ್ತು . ಗುರುತು ಪರಿಚಯವೇ ಇಲ್ಲದ ಇಂತಹ ಸಂದರ್ಭದಲ್ಲಿ ನಮ್ಮ ನೆರೆವಿಗೆ ಬಂದ  ಅಜ್ಜಿ ಪ್ರತಿದಿನ ನೆನಪಿನಲ್ಲಿರುತ್ತಾರೆ.


Arpitha Rao

Banbury

England 

Wednesday 5 August 2020

ಕೊರೋನಾದಿಂದ ಮನೆಯೊಳಗಿರುವ ಮಕ್ಕಳ ಪಾಲನೆ ಹೀಗಿರಲಿ




ಕೋವಿಡ್ ನಿಂದ ಉಳಿದ ದೇಶಗಳೆಲ್ಲ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಾ ಮೊದಲಿನಂತೆಯೇ ನಡೆಯುವ ಹಂತಕ್ಕೆ ನಿಧಾನವಾಗಿ ಬರುತ್ತಿದೆ.ಆದರೆ ಭಾರತದಲ್ಲಿ ಕೊರೋನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಮನೆಯಲ್ಲಿಯೇ ಇದ್ದು ಪರಿಸ್ಥಿತಿಯನ್ನು ಸುಧಾರಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೀಗಿದ್ದರೂ ಐದು ತಿಂಗಳಿನಿಂದ ಆಟವಾಡಲು ಕೂಡ ಮನೆಯಿಂದ ಹೊರಹೋಗದ ಸ್ಥಿತಿ ಇರುವ ಮಕ್ಕಳ ಬಗ್ಗೆ ಸ್ವಲ್ಪ ಯೋಚಿಸಿ. ಬೆಳೆಯುವ ಮಕ್ಕಳು ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಇರಬೇಕು ಎಂದರೆ ಮಕ್ಕಳ ಮಾನಸಿಕ ತೊಳಲಾಟ ಏನಿರಬಹುದು ?. 


ಕರೋನದಿಂದಾಗಿ ಮಕ್ಕಳೆಲ್ಲ ಮನೆಯಲ್ಲಿಯೇ ಕುಳಿತು ಕನಿಷ್ಠ ಐದು ತಿಂಗಳುಗಳಾಗಿವೆ ಎಂದರೆ ಖೇದವೆನಿಸುತ್ತದೆ. ಹಾಗೆಯೇ ಅವರನ್ನು ಇಡೀ ದಿನ ಸಂಬಾಳಿಸಲು ಪೋಷಕರು ಕೂಡ ಸಾಕಷ್ಟು ಪ್ರಯತ್ನಪಡುತ್ತಿರುತ್ತಾರೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಮಕ್ಕಳು ಹಳ್ಳಿಗಳಲ್ಲಿದ್ದರೆ ತೋಟ ,ಕಾಡುಮೇಡು ಸುತ್ತಬಹುದು ,ಅಜ್ಜ ಅಜ್ಜಿಯ ಜೊತೆ ಸಮಯ ಕಳೆಯಬಹುದು ಪ್ರತಿ ಬೇಸಿಗೆ ರಜೆಯನ್ನು ಕಳೆಯುವಂತೆ ಈ ಬಾರಿ ಇನ್ನಷ್ಟು ಮಜವಾಗಿ ಕಳೆಯಬಹುದು. ಆದರೆ ನಗರಗಳ ಅಪಾರ್ಟ್ಮೆಂಟ್ ಗಳಲ್ಲಿ, ಸಣ್ಣ ಸಣ್ಣ ಮನೆಗಳಲ್ಲಿ ಮನೆಯ ಒಳಗೇ ಕುಳಿತು ದಿನವಿಡೀ ಕಳೆಯಬೇಕು ಎಂದಾದಲ್ಲಿ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಿ. ಇದು ಒಂದು ಎರಡು ದಿನವಲ್ಲ ಕಳೆದ ಐದು ತಿಂಗಳಿಂದ ಎಲ್ಲೂ ಹೊರಹೋಗದೇ ಮೆನೆಯೊಳಗೇ ಇರುವ ಮಕ್ಕಳ ಪರಿಸ್ಥಿತಿ ನಿಜಕ್ಕೂ ಭಯ ತರಿಸುವಂತದ್ದು. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ ಪೋಷಕರಿಗೂ  ಸಹನೆ ಪರೀಕ್ಷಿಸುವ ಸಂದರ್ಭವಾಗಿರಬಹುದು. ಅದರಲ್ಲೂ ತಂದೆತಾಯಿ ಇಬ್ಬರೂ ಕೆಲಸ ಮಾಡುತ್ತಿದ್ದಲ್ಲಿ ಅವರ ಪರಿಸ್ಥಿತಿ ಇನ್ನೂ ಕಷ್ಟ. ಹಾಗಾದರೆ ನಮ್ಮ ಮಕ್ಕಳನ್ನು ಹೇಗೆ ದಿನವಿಡೀ ಉಲ್ಲಾಸಿತವಾಗಿ ಇಡಬಹುದು? 

ಒಂದು ವರ್ಷಅಥವಾ ಎರಡು ವರ್ಷದೊಳಗಿನ ಮಗುವಾಗಿದ್ದಲ್ಲಿ ಈ ಲಾಕ್ಡೌನ್ ಅನುಕೂಲವೇ ಆಗಿರುತ್ತದೆ .ಆದರೆ ಮೂರರಿಂದ ಆರು ವರ್ಷದ ಮಕ್ಕಳಿಗೆ ಮನೆಯಲ್ಲಿಯೇ ಇರುವುದು ಕಷ್ಟದ ಕೆಲಸ. ಆರರ ನಂತರದ ಮಕ್ಕಳಿಗೆ ಶಾಲೆಯಿಂದಲೇ ಆನ್ಲೈನ್ ತರಗತಿಗಳು ನಡೆಯುವುದರಿಂದ ಸ್ವಲ್ಪ ಸಮಯ ಹೋಂ ವರ್ಕ್ ,ತರಗತಿಗಳಿಗೆ ತಯಾರಿ ಹೀಗೆ ಸಮಯ ಸರಿಹೊಂದಬಹುದು.  ಹಾಗಿದ್ದರೆ ನಿಮ್ಮ ಮಗು ಮೂರರಿಂದ ಆರು ವರ್ಷದವರಾದರೆ ಹೀಗೆ ಕೆಲವು ಟಿಪ್ಸ್ ಪಾಲಿಸಿ ನೋಡಿ. 

ಟೈಮ್ ಟೇಬಲ್ ನಿರ್ಮಿಸಿಕೊಳ್ಳಿ :
ಮಕ್ಕಳನ್ನು ದಿನವಿಡೀ ಬ್ಯುಸಿಯಾಗಿ ಇಡಲು ಒಂದರ ನಂತರ ಒಂದು ಎಂದು ಮೊದಲೇ ಟೈಂಟೇಬಲ್ ಮಾಡಿಕೊಂಡರೆ ಇಬ್ಬರೂ ಕೆಲಸ ಮಾಡುವ ಪೋಷಕರಿಗೆ ಬಹಳ ಅನುಕೂಲವಾಗುತ್ತದೆ. ಪ್ರತಿದಿನ ಈ ಟೈಮ್ ಟೇಬಲ್ ಜೊತೆ ಇರುವುದರಿಂದ ಮಕ್ಕಳಿಗೂ ಒಂದಲ್ಲ ಒಂದು ಟಾಸ್ಕ್ ಆಯ್ಕೆ ಮಾಡಿಕೊಂಡು ತಮ್ಮಷ್ಟಕ್ಕೆ ತಾವೇ ಸ್ವಲ್ಪ ಸಮಯ ಕಳೆಯಲು ಪ್ರಾರಂಭಿಸುತ್ತಾರೆ.
ಮನೆ ಕೆಲಸದಲ್ಲಿ ತೊಡಗಿಸಿ:
ಎಲ್ಲರೂ ಮನೆಯಲ್ಲಿಯೇ ಇದ್ದು ಕೆಲಸಕ್ಕೂ ಯಾರನ್ನೂ ಕರೆಯುವಂತಿಲ್ಲ ಎನ್ನುವ ಇಂತಹ ಸಂದರ್ಭದಲ್ಲಿ  ಮನೆಯ ಕೆಲಸ ಎಂದಿಗಿಂತ ದುಪ್ಪಟ್ಟು . ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಸಾಕಷ್ಟು ಸಮಯವಿರುತ್ತದೆ , ಮನೆಯಲ್ಲಿ ಮಕ್ಕಳು ಮಾಡಬಹುದಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿ.ಉದಾಹರಣೆಗೆ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ಸರಿಯಾಗಿ ಹಾಸಿಡುವುದು.ವಾಷಿಂಗ್ ಮಷಿನ್ ಗೆ ಕೊಳೆಯಾದ ಬಟ್ಟೆಗಳನ್ನು ತೊಳೆಯಲು ಹಾಕುವುದು, ಬೆಳಗಿನ ತಿಂಡಿ ಊಟಗಳಾದ ತಕ್ಷಣ ಎಲ್ಲಾ ತಟ್ಟೆಗಳನ್ನು ತೆಗೆದುಕೊಂಡು ಹೋಗಿ ಸಿಂಕ್ ಗೆ ಹಾಕುವುದು,ಊಟಕ್ಕೆ ಮೊದಲು ತಟ್ಟೆ , ಲೋಟ ಗಳನ್ನು ತಂದು ತಯಾರುಮಾಡಿಡುವುದು . ಮನೆಯಿಂದಲೇ ಕೆಲಸ ಮಾಡುವ ಅಪ್ಪನಿಗೆ ಅಮ್ಮ ಮಾಡಿಕೊಟ್ಟ ಕಾಫಿ,ಟೀ ಅಥವಾ ಸ್ನಾಕ್ಸ್ ತೆಗೆದುಕೊಂಡು ಹೋಗಿ ನೀಡುವುದು.ಇನ್ನೂ ಆಸಕ್ತಿ ಇದ್ದರೆ ಕಿಟಕಿ ಬಾಗಿಲುಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸುವುದು ಹೀಗೆ ಸ್ವಲ್ಪ ಸಮಯವನ್ನು ಮನೆ ಕೆಲಸದಲ್ಲಿ ಕಳೆಯುವಂತೆ ಮಾಡಿ.ಮಕ್ಕಳಿಗೆ ಅಡುಗೆಯಲ್ಲಿ ಆಸಕ್ತಿಯನ್ನು ಕೂಡ ಬೆಳೆಸಬಹುದು ಸರಳವಾದ ಒಲೆಯನ್ನು,ಚಾಕುವನ್ನು ಬಹಳಸದ ಸುಲಭ ವಿಧಾನದ ,ಚಪಾತಿ ಉಂಡೆಗಳನ್ನು ಮಾಡುವುದು ಇನ್ನಿತರ ಕೆಲಸಗಳಿಗೆ ಕೆಲವು ಸಹಾಯವನ್ನು ಮಕ್ಕಳಿಂದ ಮಾಡಿಸಿಕೊಳ್ಳಿ.ತಾವು ಆಟವಾಡಿದ ಅಥವಾ ತಮ್ಮ ರೂಂ ಅನ್ನು ತಾವೇ ಸೇರಿಸಿ ಇಟ್ಟುಕೊಳ್ಳುವುದು. ಎಲ್ಲವನ್ನೂ ಒಂದೇ ದಿನವಲ್ಲದಿದ್ದರೂ ಒಂದೊಂದು ದಿನ ಒಂದೊಂದು ಟಾಸ್ಕ್ ಕೊಟ್ಟು ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಡಬಹುದು.ಹೀಗೆ ಅವರು ಹೇಳಿದ್ದನ್ನೆಲ್ಲ ಮಾಡಿದಾಗ ಪ್ರಶಂಸಿಸಿ ಪ್ರೋತ್ಸಾಹಿಸಲು ಮರೆಯಬೇಡಿ.
ಆಟವಾಡಲು ಬಿಡಿ :
ಮಕ್ಕಳನ್ನು ಸ್ವಲ್ಪ ಹೊತ್ತು ಮನೆಯೊಗಳೇ ಅವರಿಷ್ಟದ ಆಟವಾಡಲು ಬಿಡಿ. ಉದಾಹರಣೆಗೆ ಮೂರರಿಂದ ಆರುವರ್ಷದ ಮಕ್ಕಳಿಗೆ ಪಝಲ್ ಗಳನ್ನು ಮಾಡುವುದರಲ್ಲಿ ಅಥವಾ ಲೆಗೋ ಗಳಲ್ಲಿ ವಿವಿಧ ರೀತಿಯ ಮನೆ ಕಟ್ಟುವುದು,ಮನೆಯಲ್ಲಿಯೇ ಪ್ಲೇ ಡೋವ್ ಮಾಡಿ ಅದರಿಂದ ವಿವಿಧ ರೀತಿಯ ತಮಗಿಷ್ಟವಾದ ಪ್ರಾಣಿ, ಅಥವಾ ಶೇಪ್ ಗಳನ್ನು ಮಾಡುವುದು,ಈ ರೀತಿಯ ಆಟಗಳು ಆಸಕ್ತಿಕರವಾಗಿರುತ್ತವೆ. ಅವರಷ್ಟಕ್ಕೆ ಅವರು ಸುಮಾರು ಅರ್ಧ ಮುಕ್ಕಾಲು ಗಂಟೆ ಸಮಯ ಕಳೆಯಲು ಇದು ಸಹಾಯಮಾಡುತ್ತದೆ. ಹೀಗೆ ಮಾಡುವುದರಿಂದ ಮಕ್ಕಳ ಯೋಚನಾಶಕ್ತಿ ಹೆಚ್ಚುತ್ತದೆ ಮತ್ತು ಕ್ರಿಯಾಶೀಲರಾಗಲು ಕೂಡ ಇದು ಸಹಕರಿಸುತ್ತದೆ.ಸಂಜೆಯ ಸಮಯ ಮನೆಯವರೆಲ್ಲರೂ ಕುಳಿತು ಬೋರ್ಡ್ ಗೇಮ್ ಗಳನ್ನಾಡಬಹುದು.ಇದರಿಂದ ಮಕ್ಕಳಿಗೆ ಪೋಷಕರು ತಮ್ಮ ಜೊತೆ ಸಮಯ ಕಳೆಯುತ್ತಿದ್ದಾರೆ ಎಂಬುದು ಸಂತೋಷ ನೀಡುತ್ತದೆ. ಬಹುಶಃ ಈ ರೀತಿ ಪೋಷಕರ ಜೊತೆ ಕಳೆದ ಸಮಯ ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬಹುದು.  
ಅಪಾರ್ಟ್ಮೆಂಟ್ ಗಳಲ್ಲಿ ಏನಿಲ್ಲವೆಂದರೂ ಬಾಲ್ಕನಿ ಅಥವಾ ಯುಟಿಲಿಟಿ ಜಾಗ ಇದ್ದೇ ಇರುತ್ತದೆ. ಮಕ್ಕಳನ್ನು ಬೆಳಗಿನ ಎಳೆ ಬಿಸಿಲಿನಲ್ಲಿ ಅಥವಾ ಸಂಜೆಯ ತಂಗಾಳಿ ಬೀಸುವ ಸೂರ್ಯಾಸ್ತದ ಸಮಯದಲ್ಲಿ ಸ್ವಲ್ಪ ಹೊತ್ತು ಅಲ್ಲಿ ಬಿಡಿ. ಹಾಗೆಯೇ ಕೈಗೊಂದು ಪೆನ್ಸಿಲ್ ಪೇಪರ್ ಕೊಟ್ಟು ತಾವು ಹೊರಗೆ ಏನೆಲ್ಲಾ ನೋಡುತ್ತಿದ್ದಾರೆ ಮತ್ತು ಅದು ಯಾವ ಬಣ್ಣದಲ್ಲಿದೆ ಹೀಗೆ ಎಲ್ಲವನ್ನು ಬರೆಯಲು ಹೇಳಿ.ಹಾಗೆ ಬರೆಯಲು ಇನ್ನೂ ಪ್ರಾರಂಭಿಸಿರದ ಮಕ್ಕಳಿಗೆ ಚಿತ್ರ ಬಿಡಿಸುವ ಪ್ರಯತ್ನ ಮಾಡಲು ಹೇಳಬಹುದು. ಇದರಿಂದ ಮಕ್ಕಳು ಏಕಾಗ್ರತೆ,ಪ್ರಕೃತಿಯ ಬಗ್ಗೆ ಆಸಕ್ತಿ ಮತ್ತು ಕ್ರಿಯಾಶೀಲರಾಗಿ ಯೋಚಿಸುವುದನ್ನು (ಕ್ರಿಯೇಟಿವ್ ಥಿಂಕಿಂಗ್ ) ಬೆಳೆಸಿಕೊಳ್ಳುತ್ತಾರೆ.ಹೊರಗೆ ತಾವು ನೋಡಿದ ಸುಂದರ ದೃಶ್ಯಗಳ ಬಗ್ಗೆ ತಾವೇ ಕಥೆ ಕಟ್ಟಿ ಹೇಳುವಂತೆ ಪ್ರೋತ್ಸಾಹಿಸಿ. ಅಥವಾ ಬೈನಾಕ್ಯೂಲರ್ ಕೊಟ್ಟು ದೂರದ ಪ್ರಕೃತಿ, ಆಕಾಶ, ಹಕ್ಕಿ ಹೀಗೆ ಎಲ್ಲವನ್ನು ನೋಡುತ್ತಾ ಸಮಯ ಕಳೆಯಲು ಸಹಕರಿಸಿ. ರಾತ್ರಿಗಳಲ್ಲಿ ಆಕಾಶ ,ನಕ್ಷತ್ರ ,ಚಂದ್ರ , ಸಪ್ತರ್ಷಿ ಮಂಡಲಗಳನ್ನು ತೋರಿಸಿ ಅಂತರಿಕ್ಷದ  ಬಗ್ಗೆ ತಿಳಿಯುವ ತಿಳಿಯುವ ಕುತೂಹಲ ಹೆಚ್ಚಿಸಿ. ಇದು ಮಗುವಿನ ವಿಕಸನಕ್ಕೂ ಅನುಕೂಲವಾಗುತ್ತದೆ.
  ಚಿತ್ರಕಲೆ  :
ಮಕ್ಕಳಿಗೆ ಬಣ್ಣ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿ: ದಿನಕ್ಕೊಂದು ಚಿತ್ರ ಬಿಡಿಸುವುದನ್ನು ಹೇಳಿಕೊಡಿ, ಸರಳವಾಗಿ ತಮಗೆ ಸಾಧ್ಯವಾದ ರೀತಿಯಲ್ಲಿ ಹೇಳಿಕೊಟ್ಟ ಚಿತ್ರ ಬಿಡಿಸಿ ಅದಕ್ಕೆ ಬಣ್ಣ ತುಂಬುವಂತೆ ಮಾಡಿ ಇದರಿಂದ ಮಕ್ಕಳಿಗೆ ಬಣ್ಣಗಳ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಬೆಳೆಯುತ್ತದೆ. ಸಣ್ಣ ಮಕ್ಕಳಿಗೆ ಸ್ಕ್ರಬ್ ಮಾಡುವುದರಿಂದ ಬೆರಳು ಮತ್ತು ಕೈಯ ಮೇಲೆ ಹಿಡಿತ ಸಿಗುತ್ತದೆ ಇದು ಮುಂದೆ ಅವರ ಅಕ್ಷರ ಸುಂದರವಾಗಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲು, ಏಕಾಗ್ರತೆಯನ್ನು ಹೆಚ್ಚಿಸಲು ಅಷ್ಟೇ ಅಲ್ಲ ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು  ಕೂಡ ಡ್ರಾಯಿಂಗ್ ಮತ್ತು ಕಲರಿಂಗ್ ಸಹಕರಿಸುತ್ತದೆ. 
ವಿಶ್ರಾಂತಿಯೂ ಅಷ್ಟೇ ಮುಖ್ಯ :
ಮಧ್ಯಾಹ್ನದ ಸಮಯದಲ್ಲಿ ಮಕ್ಕಳಿಗೆ ವಿಶ್ರಾಂತಿಸಿಗಲಿ ,ಊಟದ ನಂತರ ಸ್ವಲ್ಪ ಹೊತ್ತು ಮಲಗುವಂತೆ ಪ್ರೋತ್ಸಾಹಿಸಿ ಬೆಳೆಯುವ ಮಕ್ಕಳಿಗೆ ಆಟ ಪಾಠದ ಜೊತೆಗೆ ವಿಶ್ರಾಂತಿ ಕೂಡ ಅಷ್ಟೇ ಅವಶ್ಯಕ. ಮಧ್ಯಾನ್ಹ ಒಂದೆರಡು ಗಂಟೆ ಮಲಗಿದರೆ ಮನಸ್ಸು ಉಲ್ಲಾಸಗೊಂಡು ಉತ್ಸಾಹ ಹೆಚ್ಚುತ್ತದೆ. 
ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆ ಕೂಡ ಮುಖ್ಯವಾಗುತ್ತದೆ ಸಮಯಕ್ಕೆ ಸರಿಯಾಗಿ ಊಟ,ನಿದ್ದೆ ಇವುಗಳ ಜೊತೆಗೆ ದೈಹಿಕ ಶ್ರಮ ಕೂಡ ಬೇಕು. ಸಂಜೆಯ ಸಮಯವನ್ನು ಕುಟುಂಬ ಸಮೇತ ವ್ಯಾಯಾಮ, ಯೋಗ ಇವುಗಳನ್ನು ಮಾಡಿ ಸಮಯ ಕಳೆಯಿರಿ. ದೈಹಿಕ ವ್ಯಾಯಾಮಗಳು ಮಕ್ಕಳ ರಾತ್ರಿ ನಿದ್ದೆಗೆ ಅನುಕೂಲಮಾಡಿಕೊಡುತ್ತದೆ. 
ಹಾಗೆಯೆ ಸಂಜೆಯ ಸಮಯದಲ್ಲಿ ಮಕ್ಕಳಿಗೆ ನೀತಿ ಕಥೆಗಳು , ರಾಮಾಯಣ ಮಹಾಭಾರತ ಕಥೆಗಳು ಇವುಗಳನ್ನು ಹೇಳುವುದನ್ನು ರೂಢಿಸಿಕೊಂಡರೆ ಮಕ್ಕಳಲ್ಲಿ ಸಂಸ್ಕೃತಿಯ ತಿಳಿವು ಹೆಚ್ಚುತ್ತದೆ. ಒಂದು ಅಧ್ಯಯನದ ಪ್ರಕಾರ ಮಕ್ಕಳಿಗೆ ಪ್ರತಿದಿನ ಮಲಗುವ ಮೊದಲು ಹೇಳುವ ಕಥೆ ಅವರ ಮನಸ್ಸಿಗೆ ಪರಿಣಾಮವನ್ನು ಬೀರುತ್ತದೆ ಇದು ಅವರ ಬದುಕನ್ನೇ ಬದಲಿಸಬಹುದು. ಹಾಗೆಯೇ ಪ್ರತಿದಿನ ಒತ್ತಡವನ್ನು ಕಡಿಮೆ ಮಾಡಲು,ಶಾಲೆಗೇ ಹೋಗದ ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಉಳಿಸಲು  ದಿನದ  ಅರ್ಧ ಗಂಟೆ ಕಥೆ ಓದುವುದು,ಹೇಳುವುದು ಮಾಡಿದಲ್ಲಿ ಅವರಲ್ಲಿ ಯೋಚನಾಶಕ್ತಿ,ತಿಳಿವಳಿಕೆ ಹೆಚ್ಚುತ್ತದೆ.ಅಥವಾ ನಿಮ್ಮ ಮಗುವಿಗೆ ಅಕ್ಷರಗಳನ್ನು ಕೂಡಿಸಿ ಓದಲು ಹುರಿದುಂಬಿಸಿ. ಇವೆಲ್ಲವುಗಳನ್ನು ಒಟ್ಟಿಗೆ ಮಾಡಲು ಮಕ್ಕಳಲ್ಲಿ ಒತ್ತಡಹೇರಬೇಕಾಗಿಲ್ಲ. ಮಕ್ಕಳಿಗೆ ಆಯ್ಕೆಯನ್ನು ಕೊಡಿ. ಉದಾಹರಣೆಗೆ ಚಿತ್ರ ಬಿಡಿಸುತ್ತೀಯಾ ಅಥವಾ ನಿನ್ನ ರೂಮ್ ಅನ್ನು ಸೇರಿಸಿ ಇಟ್ಟುಕೊಳ್ಳುತ್ತೀಯ ? ಹೀಗೆ ಅವರಿಗಿಷ್ಟವಾದುದನ್ನು ಆಯ್ದುಕೊಳ್ಳಲು ಬಿಡಿ.
ಈ ಕೊರೋನಾ ಬಂದನಂತರ ಎಲ್ಲವೂ ಆನ್ಲೈನ್ ನಲ್ಲೇ ಆಗಿರುವುದರಿಂದ ಈಗ ಸಂಗೀತ,ಡ್ರಾಯಿಂಗ್, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಇವೆಲ್ಲವುಗಳನ್ನು ಆನ್ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಕಲಿಯುವ ಅವಕಾಶವಿದೆ.ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಷ್ಟದ ಯಾವುದಾದರೂ ಒಂದು ತರಗತಿಯನ್ನು ವಾರದಲ್ಲೆರಡು ದಿನ ಕಲಿಯಲು ಅವಕಾಶ ಒದಗಿಸಿಕೊಟ್ಟಲ್ಲಿ ಮಕ್ಕಳು ಶಾಲೆಗೆ ಹಿಂತಿರುಗುವಷ್ಟರಲ್ಲಿ ಸಾಕಷ್ಟು ಶಿಕ್ಷಿತರಾಗುವುದರಲ್ಲಿ ಅನುಮಾನವಿಲ್ಲ.ಇವೆಲ್ಲದರ ಜೊತೆಗೆ ಮಕ್ಕಳ ಕುತೂಹಲಕ್ಕೆ ಸಣ್ಣಪುಟ್ಟ ಪ್ರಶ್ನೆಗಳಿಗೆ ಸಹನೆ ಕಳೆದುಕೊಳ್ಳದೆ ತಾಳ್ಮೆಯಿಂದ ಉತ್ತರಿಸುವುದು ಕೂಡ ಅಷ್ಟೇ ಮುಖ್ಯ.ನಾಲ್ಕು ಗೋಡೆಯ ಒಳಗೆ ಕುಳಿತಿರುವ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಈ ಸಮಯದಲ್ಲಿ ಪ್ರೋತ್ಸಾಹ ,ಉತ್ತೇಜನ ಎಲ್ಲವನ್ನು ಪೋಷಕರೇ ನೀಡಬೇಕಾದ ಅನಿವಾರ್ಯತೆ ಇದೆ ಅಲ್ಲವೇ ?

Arpitha Rao 
Banbury 
United kingdom 

Monday 3 August 2020

ರಕ್ಷಾಬಂಧನದಿಂದ ಬಾಂಧವ್ಯ ಹೆಚ್ಚಲಿ




ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು ಬೆನ್ನು ತಟ್ಟುವರು ಸಭೆಯೊಳಗೆ ' ಹೀಗೊಂದು ಜಾನಪದ ಗೀತೆ ಹಿಂದೆ ಮನೆಮನೆಯ ಹೆಣ್ಣು ಮಕ್ಕಳು ಹಾಡುತ್ತಿದ್ದರು . ಬಹುತೇಕ ಕನ್ನಡಿಗರರಿಗೆ ಇದರ ಬಗ್ಗೆ ಅರಿವಿರದೇ ಇಲ್ಲ. ಹಾಗೆ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತನ್ನ ರಕ್ಷೆಗೆ ಸಹೋದರನಿದ್ದಾನೆ ಎಂದು ಹೆಮ್ಮೆ ಪಡುತ್ತಾಳೆ. ಹಾಗೆಯೆ ಗಂಡಿಗೆ ಛೇಡಿಸಲು ,ಜೊತೆಗೆ ಬೆಳೆಯಲು ಪ್ರೀತಿಯ ತಂಗಿ ತಾಯಿಯಂತಹ ಅಕ್ಕನ ಅವಶ್ಯಕತೆ ಇದೆ. ಇಂತಹ ಒಂದು ಅದ್ಬುತ ಸಂಬಂಧವನ್ನು ಬಿಂಬಿಸುವ ಅದಕ್ಕಾಗಿ ಕೃತಜ್ಞತೆ ತೋರಿಸುವ ಹಬ್ಬವೇ ರಾಖಿ ಹಬ್ಬ ಅಥವಾ ರಕ್ಷಾಬಂಧನ ಎಂದೇ ಕರೆಸಿಕೊಳ್ಳುವ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ. ರಕ್ಷಾ ಬಂಧನವನ್ನು ರಾಖಿ ಹಬ್ಬ , ರಾಖಿ ಪೂರ್ಣಿಮಾ ಎಂದು ಕೂಡ ಕರೆಯಲಾಗುತ್ತದೆ .

  ಶ್ರಾವಣ ಮಾಸದ ಮೊದಲ ಹುಣ್ಣಿಮೆಯ  ದಿನ ಹಿಂದೂಗಳು ಆಚರಿಸುವ ಈ ಹಬ್ಬ ಭಾರತ ಮತ್ತು ನೇಪಾಳಗಳಲ್ಲಿ ಆಚರಿಸಲಾಗುತ್ತದೆ. ಕೊಲ್ಕತ್ತಾದಲ್ಲಿ ಇದನ್ನು ಹಿಂದೂ ಮುಸ್ಲಿಂಗಳು ಒಬ್ಬರಿಗೊಬ್ಬರು ರಾಖಿ ಕಟ್ಟುವುದರ ಮೂಲಕ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಆಚರಿಸುತ್ತಾರೆ. ಇಂತಹದ್ದೊಂದು ಆಚರಣೆಯನ್ನು ರವೀಂದ್ರನಾಥ್ ಟ್ಯಾಗೋರ್ ಅವರು 1905 ರಲ್ಲಿ ಕೋಲ್ಕತ್ತಾದಲ್ಲಿ ಪ್ರಾರಂಭಿಸಿದರು ಎಂಬುದು ಈಗ ಇತಿಹಾಸ. ರಾಖಿ ಕೇವಲ ಒಡಹುಟ್ಟಿದ ಅಣ್ಣ ತಂಗಿಯ ಮಧ್ಯೆ ಮಾತ್ರವಲ್ಲದೇ ಸಾಕಷ್ಟು ಜನರು ಮನೆಯ ಹೊರಗೆ ಕೂಡ ಸಾಕಷ್ಟು ಅಣ್ಣ ತಮ್ಮಂದಿರನ್ನು ಹುಡುಕಿಕೊಂಡು ರಾಖಿ ಕಟ್ಟಿ ರಕ್ಷಣೆಯ ಭರವಸೆಯನ್ನು ಕಂಡು ಕೊಂಡಿದ್ದಾರೆ.

  ರಕ್ಷಾಬಂಧನದ ದಿನ ಸಹೋದರಿಯರು ತಮ್ಮ ಸಹೋದರಿಗೆ ರಾಖಿಯನ್ನು ಕಟ್ಟಿ ಸಿಹಿ ತಿನಿಸಿ ಸಂಭ್ರಮಿಸಿದರೆ ಸಹೋದರರು ರಾಖಿ ಕಟ್ಟಿದ ತಂಗಿ ಅಥವಾ ಅಕ್ಕಂದಿರಿಗೆ ತಮ್ಮ ಕೈಲಾದ ಉಡುಗೊರೆಯನ್ನು ನೀಡುವುದು ಸಾಮನ್ಯವಾಗಿ ಮೊದಲಿನಿಂದ ನಡೆದುಕೊಂಡು ಬಂದಿರುವ ಹಬ್ಬದ ಪದ್ಧತಿಯಾಗಿದೆ.    
  ಈ ರಾಖಿ ಹಬ್ಬ ಈಗಿನದಲ್ಲ ಪುರಾಣದಿಂದಲೂ ನಡೆದುಕೊಂಡು ಬಂದಿದೆ ಎಂಬುದಕ್ಕೆ ದ್ರೌಪದಿ ಮತ್ತು ಕೃಷ್ಣ ರ ಅಣ್ಣ ತಂಗಿಯ ದ್ರೌಪದಿ ವಸ್ತ್ರಾಪಹರಣವೇ ಸಾಕ್ಷಿ  ಎಂಬುದನ್ನು ತಿಳಿಯದವರಿಲ್ಲ. ದ್ರೌಪದಿಯ ವಸ್ತ್ರಾಪಹರಣ ಮಾಡುವ ಸಂದರ್ಭದಲ್ಲಿ ಆಕೆ ಕೃಷ್ಣನನ್ನು ತನ್ನ ರಕ್ಷಿಸುವಂತೆ ಮೊರೆ ಹೋಗುವುದು ಮತ್ತು ಶ್ರೀ ಕೃಷ್ಣ ಆಕೆಯನ್ನು ರಕ್ಷಿಸುವುದನ್ನು ಕೂಡ ರಕ್ಷಾ ಬಂಧನದ ಸಂಕೇತವಾಗಿ ಪರಿಗಣಿಸಲಾಗಿದೆ.
ಹಾಗೆಯೇ ಇನ್ನೊಂದು ಸಂದರ್ಭದಲ್ಲಿ ಶಿಶುಪಾಲನನ್ನು ಕೊಳ್ಳಲು ಕೃಷ್ಣನು ಸುದರ್ಶನ ಚಕ್ರವನ್ನು ಬೀಸುತ್ತಾನೆ ಆಗ ಕೃಷ್ಣನ ಕೈಬೆರಳಿಗೆ ಸ್ವಲ್ಪ ತಾಗಿ ರಕ್ತ ಸುರಿಯಲಾರಂಭಿಸುತ್ತದೆ ಈ ಸಂದರ್ಭದಲ್ಲಿ ದ್ರೌಪದಿಯು ತನ್ನ ಸೀರೆಯ ಅಂಚನ್ನು ಹರಿದು ಕೃಷ್ಣ ಕೈಬೆರಳಿಗೆ ಸುತ್ತಿ ರಕ್ತ ಸುರಿಯುವುದನ್ನು ನಿಲ್ಲಿಸುತ್ತಾಳೆ. ಹೀಗೆ ರಕ್ಷಾ ಬಂಧನ ಎಂದರೆ ಕೇವಲ ಅಣ್ಣ ತಂಗಿಯನ್ನು ರಕ್ಷಿಸುವುದು ಮಾತ್ರವಲ್ಲ ಸಮಯ ಬಂದಲ್ಲಿ ಸಹೋದರಿಯರು ಕೂಡ ಸಹೋದರರ ಜೊತೆಗೂಡಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಲ್ಲುತ್ತದೆ.

ಪುರಾಣಗಳಲ್ಲಿ ಮಾತ್ರವಲ್ಲ ಇತಿಹಾಸದಲ್ಲೂ ರಕ್ಷಾಬಂಧನವನ್ನು ಉಪಯೋಗಿಸಿಕೊಂಡ ಉದಾಹರಣೆಗಳು ಉಲ್ಲೇಖವಾಗಿವೆ . ವಿಧವೆಯಾದ ಚಿತ್ತೂರಿನ ರಾಣಿ ಕರ್ಣಾವತಿಯು ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳಲು ಮೊಘಲರ ರಾಜ ಹುಮಾಯೂನ್ ನಿಗೆ ರಾಖಿಯನ್ನು ಕಳಿಸಿ ರಕ್ಷಣೆಯ ಮೊರೆಹೋಗುತ್ತಾಳೆ ಮತ್ತು ಇದಕ್ಕೆ ಒಪ್ಪಿದ ಹುಮಾಯುನ್ ರಾಣಿ ಕರ್ಣಾವತಿಯ ಬೆಂಬಲಕ್ಕೆ ಬರುತ್ತಾನೆ ಎಂಬುದು ಇತಿಹಾಸದಲ್ಲೂ ದಾಖಲಿಸಲಾಗಿದೆ.   
ಭಾರತದಾದ್ಯಂತ ಸಂಭ್ರಮದಿಂದ ಆಚರಿಸುವ ಈ ಹಬ್ಬ ಹೊರ ದೇಶಗಳಲ್ಲಿ ಕೂಡ ಭಾರತೀಯರು ತಪ್ಪದೆ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಖಿಯನ್ನು ಆನ್ಲೈನ್ ಮೂಲಕ ಸ್ವಂತ ಅಣ್ಣ ತಮ್ಮಂದಿರಿಗೆ ಮನೆಗೇ ಕಳಿಸುವ ಅವಕಾಶವಿದೆ. ಅಷ್ಟೇ ಅಲ್ಲದೆ ರಾಖಿಯನ್ನು ಚಿಕ್ಕ ಮಕ್ಕಳು ಕೂಡ ಆಚರಿಸಿ ನಮ್ಮ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ. 

ಈಗಂತೂ ರಾಖಿ ಹಲವಾರು ಬಗೆಗಳಲ್ಲಿ ಲಭ್ಯ. ಚಿಕ್ಕ ಮಕ್ಕಳು ಒಬ್ಬರಿಗೊಬ್ಬರು ರಾಖಿ ಕಟ್ಟಿ ಸಂತೋಷ ಪಡಲು ಕಾರ್ಟೂನ್ ಗಳನ್ನು ಒಳಗೊಂಡ ರಾಖಿಗಳು , ಹಾಗೆಯೇ  ಪರಿಸರಕ್ಕೆ ಹೊರೆಯಾಗದಂತ ಭೂಮಿಯಲ್ಲಿ ಕರಗುವ ಪರಿಸರಸ್ನೇಹಿ ರಾಖಿಗಳು , ಪೊಂ ಪೊಂ ರಾಖಿ , ವುಲ್ಲನ್ ನಲ್ಲಿ , ಬಟ್ಟೆಯಲ್ಲಿ ಮಾಡಿದ ರಾಖಿಗಳು , ಇನ್ನು ಫೋಟೋ ರಾಖಿಗಳು , ಸಂಗೀತ ಹೊಮ್ಮಿಸುವ ರಾಖಿಗಳು . ಅಷ್ಟೇ ಏಕೆ ಬ್ರೇಸ್ ಲೈಟ್ ನಂತಹ ಬಂಗಾರ ಬೆಳ್ಳಿಗಳ್ಲಲೂ ಕೂಡ ರಾಖಿ ಮಾಡಿಸಿ ಕೊಡಬಹುದು.

ಹೀಗೆ ರಾಖಿ ಪೂರ್ಣಿಮೆಗೆ ತನ್ನದೇ ಆದ ವಿಶೇಷತೆ ಇದೆ . ಇದೇ ಆಗಸ್ಟ್ ಮೂರರಂದು ರಾಖಿ ಹಬ್ಬ . ಕರೋನದಿಂದಾಗಿ ತವರೂರಿಗೆ ಹೋಗಲಾರದಿದ್ದರೇನಂತೆ ಈಗಂತೂ ಆನ್ಲೈನ್ ವ್ಯಯಸ್ಥೆ ಇದೆ . ಇನ್ನೇಕೆ  ತಡ ಈಗಲೇ ನಿಮ್ಮ ಸಹೋದರರಿಗೆ ರಾಖಿ ಕಳಿಸಿ ಸಂಭ್ರಮ ಆಚರಿಸಿ. 


Arpitha Rao 
Banbury 

United kingdom 

Tuesday 28 July 2020

ಕರ್ನಾಟಕದಲ್ಲಿ ನಾಗರಪಂಚಮಿ

Published in Omanase Magazine http://www.omanase.com/nagara-panchami-festival/



ಕೋವಿಡ್ ನಿಂದಾಗಿ ಇಂದು ಎಲ್ಲವೂ ಡಿಜಿಟಲ್ ಮಾಯವಾಗಿದೆ.ಮನೆಯಿಂದ ಹೊರಗೆ ಹೋಗುವಂತಿಲ್ಲ ಇನ್ನು ವಿದೇಶದಲ್ಲಿರುವವರು ಕೇವಲ ಫೋನ್ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುವುದು ಮೊದಲಿನಿಂದಲೂ ಅನಿವಾರ್ಯವಾದರೆ ಈಗ ಭಾರತದ ಎಲ್ಲೆಡೆಗಳಲ್ಲಿ ಕೇವಲ ಫೋನ್ ಅನಿವಾರ್ಯವಾಗಿದೆ .ಹಾಗೆ ಅಮ್ಮನಿಗೆ ಫೋನ್ ಮಾಡಿದಾಗ ಶನಿವಾರ ನಾಗಪಂಚಮಿ ಹಬ್ಬ ಎನ್ನುವುದು ತಿಳಿಯಿತು .ನಾಗರಪಂಚಮಿ ಎಂದರೆ ಹಬ್ಬದ ಹಳೆಯ ನೆನಪುಗಳು. ಚಿಕ್ಕವರಿರುವಾಗ ಹಬ್ಬಗಳೆಂದರೆ ಮನೆಯಲ್ಲಿ ಸಡಗರ ಸಂಭ್ರಮ. ವಿದೇಶಗಳಲ್ಲಿ ದೀಪಾವಳಿ ಇನ್ನಿತರ ಹಬ್ಬವನ್ನು ಆಚರಿಸಿದರೂ ನಾಗರ ಪಂಚಮಿ ಆಚರಿಸುವುದು ಕನಸೇ ಸರಿ.

ಕರ್ನಾಟಕದಲ್ಲಿ ನಾಗರಪಂಚಮಿ ಎಂದರೆ ವಿಶೇಷ .ಅದರಲ್ಲೂ  ಹೆಣ್ಣು ಮಕ್ಕಳೆಲ್ಲ ಸೇರಿ ಹೊಸ ಬಟ್ಟೆ ಹಾಕಿ,ಹೂವು ಮುಡಿದು,ಅಲಂಕಾರ ಮಾಡಿಕೊಂಡು ತಟ್ಟೆಯಲ್ಲಿ ಹಾಲು, ನೀರು ,ಅರಿಶಿನ ಎಲ್ಲವನ್ನು ಹಿಡಿದುಕೊಂಡು ನಾಗಪ್ಪನಿಗೆ ತಣಿ ಎರೆಯಲು ನಾಗರಕಲ್ಲಿಗೆ ಹೋಗುವುದು ಸಾಮಾನ್ಯವಾಗಿ  ಮಲೆನಾಡಿನ ಭಾಗಗಳಲ್ಲಿ ನಾಗಪಂಚಮಿ ದಿನಗಳಲ್ಲಿ ಕಾಣುವ  ದೃಶ್ಯ.
ಮಲೆನಾಡು ಭಾಗಗಳಲ್ಲಿ ನಾಗರಪಂಚಮಿಯನ್ನು ಹೆಣ್ಣು ಮಕ್ಕಳ ಹಬ್ಬ ಎಂದೇ ಪರಿಗಣಿಸುತ್ತಾರೆ.ಹೆಣ್ಣು ಮಕ್ಕಳು ಅಲಂಕಾರ ಮಾಡಿಕೊಂಡು ನಾಗರ ಕಲ್ಲಿಗೆ ತಣಿ ಹಾಲು ಎರೆದು  ಪೂಜಿಸುವುದು ಇದರ ವಿಶೇಷತೆ.ನಾಗರ ಪಂಚಮಿ ಹಬ್ಬದಂದು ನಾಗಪ್ಪ ಅಥವಾ ನಾಗರ ಕಲ್ಲುಗಳನ್ನು ಹೆಚ್ಚಾಗಿ ಅರಿಶಿನ ಬಳಿದು, ಹಾಲು ಎರೆದು, ಹೂವಿನ ಹಾರ ಏರಿಸಿ ಪೂಜಿಸುವುದು ರೂಡಿ .ಕೆಲ ಭಾಗಗಳಲ್ಲಿ ಪ್ರತಿ ಹಳ್ಳಿಗೆ ಒಂದು ಅಥವಾ ಕೆಲವೊಮ್ಮೆ ಮನೆಯ ಹಿಂಬಾಗಗಳಲ್ಲಿ,ತೋಟಗಳಲ್ಲಿ ಹೀಗೆ ನಾಗರ ಕಲ್ಲು ಅಥವಾ ಹುತ್ತಗಳು ಸಾಮಾನ್ಯವಾಗಿ ಇರುವುದು ವಿಶೇಷ .ಇನ್ನು ಹಬ್ಬ ಎಂದರೆ ಪೂಜೆಯ ಸಂಭ್ರಮದ ಜೊತೆಗೆ ವಿವಿಧ ಅಡುಗೆಗಳನ್ನು ತಯಾರಿಸುವುದು,ಸಿಹಿ ಖಾದ್ಯಗಳನ್ನು ಮಾಡುವುದು ಭಾರತದ ಎಲ್ಲೆಡೆಗಳಲ್ಲಿ ವಿಶೇಷವಾಗಿ ನಡೆಯುವುದು ಸರ್ವೇ  ಸಾಮಾನ್ಯ .ನಾಗರ ಪಂಚಮಿ ಎಂದರೆ ನಾಗಪ್ಪನಿಗೆ ಪ್ರಿಯವಾದ ಚಪ್ಪೆ ದೋಸೆ ಮತ್ತು ಎಳ್ಳು,ಅರಳು,ಶೇಂಗಾ ಹೀಗೆ ವಿವಿಧ ರೀತಿಯ ಉಂಡೆಗಳನ್ನು ಮಾಡಲಾಗುತ್ತದೆ.ಮಲೆನಾಡಿನ ಇನ್ನು ಕೆಲವು ಭಾಗಗಳಲ್ಲಿ ನಾಗರ ಪಂಚಮಿ ಹಬ್ಬದ ದಿನದಂದು ಅರಿಶಿನದ ಎಲೆಗಳಲ್ಲಿ ಸುತ್ತಿ ಕಡುಬು ಮಾಡಲಾಗುತ್ತದೆ.


ಅದರ ಜೊತೆಗೆ ನಾಗರ ಪಂಚಮಿ ಹಬ್ಬಕ್ಕೆ ಹೆಣ್ಣು ಮಕ್ಕಳು ತಮ್ಮ ತವರಿಗೆ ಹೋಗುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ನಾಗರ ಪಂಚಮಿ ಹಬ್ಬ ಹತ್ತಿರ ಬರುತ್ತಿದ್ದಂತೆ ಅಣ್ಣ ಅಥವಾ ತಮ್ಮಂದಿರು ಹೋಗಿ ತಮ್ಮ ಸಹೋದರಿಯನ್ನು ಮನೆಗೆ ಬರಲು ಆಹ್ವಾನಿಸುವುದು ಮೊದಲಿನಿಂದ ನಡೆದುಕೊಂಡು ಬಂದಿದೆ. ಆದ್ದರಿಂದಲೇ ಇದನ್ನು ಹೆಣ್ಣು ಮಕ್ಕಳ ಹಬ್ಬ ಎನ್ನಲಾಗುತ್ತದೆ .


ಈ ಬಾರಿ ಕೋವಿಡ್ ನಿಂದಾಗಿ ಎಲ್ಲೆಡೆಗಳಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ.  ಆದಷ್ಟು ಬೇಗ ಕರೋನ ಹಾವಳಿ ಕಡಿಮೆಯಾದಲ್ಲಿ ಮುಂಬರುವ ಹಬ್ಬವನ್ನು ಮೊದಲಿನಂತೆ ಆಚರಿಸಬಹುದು ಎಂಬುದೊಂದೇ ಆಶಯ. 

Arpitha Rao
Banbury
United kingdom 

Sunday 12 July 2020

ಕೊರೋನಾ ಲೊಕ್ಡೌನ್ ನಂತರದ ಇಂಗ್ಲೆಂಡ್

Published in OManase Magazine http://www.omanase.com/?p=4052





ನೆಗಡಿ ,ವಿಪರೀತ ಸುಸ್ತು , ಜ್ವರ, ಏದುಸಿರು ತುಂಬಿದ ಸತತ ಕೆಮ್ಮು ಹೀಗೊಂದಿಷ್ಟು ಲಕ್ಷಣಗಳೊಂದಿಗೆ ಕೊರೊನ ಎಂಬ ಹೊಸದಾದ ವೈರಸ್ ಬಂದು ಅರ್ಧದಷ್ಟು ಜನರ ಜೀವವನ್ನೇ ತೆಗೆಯುತ್ತದೆ ಎಂದು ಪ್ರಪಂಚಕ್ಕೆ ತಿಳಿಯುವಷ್ಟರಲ್ಲಿ ಅದೆಷ್ಟೋ ಜನ ಆಗಲೇ ಸತ್ತಾಗಿತ್ತು . ಸ್ವಲ್ಪ ತಡವಾಗಿ ಇದು ಯು , ಕೆ ಗೆ ಬಂದರೂ ಕೂಡ ಇಂಗ್ಲೆಂಡ್ ಜನರಿಗೆ ತಿಳಿದು  ಇದಾಗಲೇ ನಾಲ್ಕು  ತಿಂಗಳುಗಳೇ ಕಳೆದುಹೋಯಿತು . ಫೆಬ್ರವರಿಯ ಕೊನೆಯಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭವಾದ ಈ ವೈರಸ್ ವುಹಾನ್ ಎಂಬಲ್ಲಿ ಸೃಷ್ಟಿಯಾಗಿ ಅದಾಗಲೇ ೩ ತಿಂಗಳ ಮೇಲಾಗಿತ್ತು .ತಕ್ಷಣಕ್ಕೆ ಏನು ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲದ ಸರ್ಕಾರ ಕೊನೆಗೆ ಲಾಕ್ ಡೌನ್ ಮಾಡುವ ವೇಳೆಗಾಗಲೇ ವೈರಸ್ ಹರಡುವಿಕೆ ವ್ಯಾಪಕವಾಗಿ ಯುಕೆ ಯಲ್ಲಿ ಇದರ ಸಂಖ್ಯೆ ಐವತ್ತು ಸಾವಿರವಾಗಿತ್ತು. ಲಕ್ಷವನ್ನು ದಾಟಿ ಸರಿಸುಮಾರು ಮೂರೂವರೆ  ಲಕ್ಷ ಜನರಿಗೆ ಕೊರೋನಾ ಪಾಸಿಟಿವ್ ಬಂದು ಆಸ್ಪತ್ರೆ ಸೇರಿದರೆ ಅದೆಷ್ಟೋ ಮಂದಿ  ಮನೆಮದ್ದಿನಲ್ಲಿಯೇ ಕಡಿಮೆ ಮಾಡಿಕೊಂಡವರೂ ಇದ್ದಾರೆ.ಅಂತವರ ಸಂಖ್ಯೆ ಯಾರಿಗೂ ಲೆಕ್ಕಕ್ಕೇ ಸಿಗಲಿಲ್ಲ .ಇಂತದ್ದೊಂದು ವೈರಸ್ ಬಂದು ಅತಿವೇಗವಾಗಿ ನಡೆಯುತ್ತಿದ್ದ ಪ್ರಪಂಚವನ್ನು ನಿಲ್ಲಿಸಿ ವ್ಯಾಪಕವಾಗಿ ಹರಡಿ ಸುಮಾರು ಆರು ತಿಂಗಳಲ್ಲಿ ಐದು ಲಕ್ಷದಷ್ಟು ಜನರನ್ನು ಸಾಯಿಸಿದೆ ಮತ್ತು ಇನ್ನೂ ಹರಡುತ್ತಲೇ ,ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂಬುದು ನಿಜಕ್ಕೂ ಭಯ ಹುಟ್ಟಿಸುವಂತದ್ದು . ಇದಕ್ಕೆ ಎಂದು ಕೊನೆ ಎಂಬುದಕ್ಕೆ ಬಹುಶಃ ಯಾರಲ್ಲೂ ಇನ್ನೂ ಉತ್ತರವಿಲ್ಲ . ಯುಕೆ ಯಲ್ಲಿ ಆರಂಭದಲ್ಲಿ ಸಣ್ಣ ಪ್ರಮಾಣದ ಕೋವಿಡ್ ಲಕ್ಷಣಗಳಿದ್ದಲ್ಲಿ ಮನೆಯಲ್ಲಿಯೇ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರ ಬರಕೂಡದು ಎಂಬುದನ್ನು ಸರ್ಕಾರವೇ ನಿರ್ಧರಿಸಿ ಜನರಿಗೆ ತಿಳಿಹೇಳಿತ್ತು. ಹಾಗಾಗಿಯೇ ಸಾಕಷ್ಟು ಜನರಿಗೆ ಕಾಣಿಸಿಕೊಂಡ ಸಣ್ಣ ಪ್ರಮಾಣದ ಕೊರೋನಾವನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡುವುದರ ಮೂಲಕ ಕೆಲವು ಮಂದಿ ಗುಣಮುಖರಾಗಿದ್ದಾರೆ.ನಂತರದ ದಿನಗಳಲ್ಲಿ ಟೆಸ್ಟ್ ಮಾಡುವ ಸಂಖ್ಯೆ ಮತ್ತು ವೆಂಟಿಲೇಟರ್ ಎಲ್ಲವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಪ್ರಯತ್ನವನ್ನು ಸರ್ಕಾರ ಮತ್ತು ಇಲ್ಲಿ ನ್ಯಾಷನಲ್ ಹೆಲ್ತ್ ಸರ್ವಿಸ್ ಗಳು ಮಾಡಿವೆ. ಎಂಟು ವಾರಗಳವರೆಗೆ ಲಾಕ್ ಡೌನ್ ಜಾರಿಗೆ ತಂದು ಅಗತ್ಯವಿದ್ದರೆ ಮಾತ್ರ ಹೊರಬರಬೇಕು ಎಂದು ಸರ್ಕಾರ ಜಾರಿ ತಂದ ವಿಷಯ ಈಗ ಹಳೆಯದು.

ಈಗಾಗಲೇ ಇಂಗ್ಲೆಂಡ್ ನಲ್ಲಿ ಪ್ರಾಥಮಿಕ ಶಾಲೆಗಳನ್ನು  ಅಂದರೆ ನರ್ಸರಿ , ರೆಸೆಪ್ ಷನ್ ಮತ್ತು ಒಂದು ,ಆರನೇ ತರಗತಿಯನ್ನು ತೆರೆದಿದ್ದು  ಮಕ್ಕಳು ಆಗಲೇ ಆರನೇ ವಾರವನ್ನು ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಮುಗಿಸುತ್ತಿದ್ದಾರೆ .ಆದರೆ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗಬೇಕು ಎಂಬುದನ್ನು ಕಡ್ಡಾಯಗೊಳಿಸದೆ ಪೋಷಕರ ಆಯ್ಕೆಗೆ ಬಿಟ್ಟಿದ್ದಾರೆ . ಇನ್ನೊಂದು ವಾರವನ್ನು ಮುಗಿಸಿದರೆ ಜುಲೈ ಇಪ್ಪತ್ತರಿಂದ  ಆಗಸ್ಟ್ ಕೊನೆಯವರೆಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳಿಗೆ ಮಧ್ಯದಲ್ಲಿ ಬಿಡುವು ಕೂಡ ಸಿಗುತ್ತದೆ. ಈ ಸಮಯದಲ್ಲಿ ಶಾಲೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಹೊಸದಾಗಿ ತಯಾರಿ ನಡೆಸಿ  ಸೆಪ್ಟೆಂಬರ್ ನಿಂದ ಎಲ್ಲಾ ತರಗತಿಗಳನ್ನು ತೆರೆದು ಮೊದಲಿನಂತೆ ಶಾಲೆಗಳನ್ನು ನಡೆಸುವ ಎಲ್ಲಾ ಪ್ರಯತ್ನ ನಡೆಯುತ್ತಿದೆ ಮತ್ತು ಶಾಲೆಗೆ  ಪ್ರತಿಯೊಬ್ಬ ವಿದ್ಯಾರ್ಥಿ ಹಾಜರಿರುವುದು ಖಡ್ಡಾಯ ಒಂದು ವೇಳೆ ಹಾಜರಾಗದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡಲೇಬೇಕು ಎಂದು ಸರ್ಕಾರ ನಿರ್ಧರಿಸಿದೆ. 

ಇನ್ನು ಕೋವಿಡ್ ಪಾಸಿಟಿವ್ ಸಂಖ್ಯೆ ಸಾಕಷ್ಟು ಕಡಿಮೆಯಾಗಿದ್ದು ದಿನಕ್ಕೆ ಸಾವಿರದ ಆಸುಪಾಸು ಮತ್ತು ಸಾವಿನ ಸಂಖ್ಯೆ ಕೂಡ  ಹೆಚ್ಚು ಕಡಿಮೆ ನೂರರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇನ್ನೂ ದಿನದಿಂದ ದಿನಕ್ಕೆ ಸುಧಾರಿಸುತ್ತಿರುವುದು ಜೊತೆಗೆ ಆಕ್ಸ್ಫರ್ಡ್ ವಿಶ್ವವಿಧ್ಯಾಲಯ ವ್ಯಾಕ್ಸಿನೇಷನ್ ಪ್ರಯೋಗ ಪ್ರಾರಂಭಿಸುವ ಯೋಜನೆಯಲ್ಲಿರುವುದು ಒಂದು ರೀತಿ ಜನರಲ್ಲಿ ಭರವಸೆಯನ್ನು ತಂದಿದೆ.

ಮನೆಯಿಂದ ಕೆಲಸ ಮಾಡಲು ಅವಕಾಶವಿಲ್ಲದ ಎಲ್ಲಾ ಕಂಪನಿಗಳು ಕೂಡ ಮೊದಲಿನಂತೆ ಕೆಲಸಕ್ಕೆ ಸಜ್ಜಾಗಿವೆ . ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಾಕಷ್ಟು ಜನರು ಕೆಲಸಕ್ಕೆ ಹಿಂದಿರುಗಿದ್ದಾರೆ. ಹಾಗೆಯೇ ಜುಲೈ ನಾಲ್ಕರಿಂದ ಪಬ್ , ಮಾಲ್ ಮತ್ತು ಹೇರ್ ಸಲೂನ್ ,ಬ್ಯೂಟಿ ಪಾರ್ಲರ್ ಮತ್ತು ಥೀಮ್ ಪಾರ್ಕ್,ರೆಸ್ಟೋರೆಂಟ್  ಗಳನ್ನೂ ಯುನೈಟೆಡ್ ಕಿಂಗ್ಡಮ್ ನ ಎಲ್ಲೆಡೆಗಳಲ್ಲಿ ತೆರೆಯಲಾಗಿದೆ. ಪಬ್ ಗಳಲ್ಲಿ ಮೊದಲಿನಂತೆ ಜನ ದಟ್ಟಣೆ ಇಲ್ಲದಿದ್ದರೂ ಕೂಡ ಸಾಕಷ್ಟು ಜನರು ಈಗಾಗಲೇ ಮೊದಲಿನಂತೆ ಪಬ್ ಗಳಿಗೆ ಪುನರಾರಂಭಿಸಿದ್ದಾರೆ. ಅಲ್ಲಿಯೂ ಕೂಡ ಕ್ಯೂನಲ್ಲಿ ನಿಂತು ತೆಗೆದುಕೊಳ್ಳುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಒದಗಿಸುವುದು ಜೊತೆಗೆ ಗ್ರಾಹಕರ ಸಂಪೂರ್ಣ ವಿಳಾಸವನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ. ಅವಶ್ಯಕತೆ ಬಂದರೆ ಅಂದರೆ ಯಾವುದಾದರೂ  ಪಾಸಿಟಿವ್  ಕೇಸ್ ಬಂದಲ್ಲಿ ಟ್ರೇಸ್ ಮಾಡಲು ಅನುಕೂಲವಾಗಲು ಈ ವಿಧಾನವನ್ನು ಕಡ್ಡಾಯ ಮಾಡಲಾಗಿದೆ. ಇನ್ನು ಥೀಮ್ ಪಾರ್ಕ್ ಗಳಲ್ಲಿ ಪ್ರತಿ ರೈಡ್ ನಲ್ಲಿ ಕೇವಲ ಒಂದು ಕುಟುಂಬದವರು ಅಥವಾ ಒಂದು ಎರಡು ಜನರನ್ನು ಮಾತ್ರ ಕೂರಿಸಲಾಗುತ್ತಿದೆ . ಪ್ರತಿಭಾರಿ ರೈಡ್ ಮುಗಿಯುತ್ತಿದ್ದಂತೆ ಅಗತ್ಯಕ್ಕೆ ತಕ್ಕಂತೆ ಸೀಟ್ ಗಳನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಿಯೇ ಮುಂದಿನ ಆಟ , ಜೊತೆಗೆ ಪ್ರತಿಯೊಬ್ಬರೂ ಮಾಸ್ಕ ಧರಿಸುವುದು ಕಡ್ಡಾಯ ಮಾಡಲಾಗಿದೆ .ಸಾರ್ವಜನಿಕ ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸುವವರು ಕೂಡ ಮಾಸ್ಕ ಧರಿಸುವುದು ಮತ್ತು ತಮ್ಮ ಕಾಳಜಿಯಲ್ಲಿ ತಾವಿರುವುದು ಕಡ್ಡಾಯ . ಹೀಗೆ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಂಡ ನಂತರ ಜನಜೀವನ ಸಂಪೂರ್ಣ ಅಲ್ಲದಿದ್ದರೂ ಕೂಡ ಶೇಖಡಾ 8೦ ರಷ್ಟು ಮೊದಲಿನಂತೆಯೇ ನಡೆಯುತ್ತಿದೆ.ಸಾವಿನ ಸಂಖ್ಯೆ ಮತ್ತು ಪಾಸಿಟಿವ್ ನ ಸಂಖ್ಯೆ ಬಹಳಷ್ಟು ಇಳಿಮುಖವಾಗಿರುವುದರಿಂದ ಜನರೂ ಕೂಡ ನಾಲ್ಕು ತಿಂಗಳ ನಂತರ ಹೊರಹೊರಟಿದ್ದಾರೆ. ಹಾಗಾಗಿ ಪಾರ್ಕ್ ಗಳಲ್ಲಿ , ಸಲೂನ್ , ಸೂಪರ್ ಮಾರ್ಕೆಟ್ ಹೀಗೆ ಎಲ್ಲೆಡೆ ಜನರನ್ನು ಕಾಣಬಹುದು .ಹೊರಗೆ ಹೋಗುವ ಅನಿವಾರ್ಯತೆ ಇಲ್ಲದವರು ಆದಷ್ಟು ಮನೆಯಲ್ಲಿಯೇ ಇರಬೇಕಾಗಿ ಕೂಡ ಕೇಳಿಕೊಳ್ಳಲಾಗಿದೆ.

ಅರ್ಪಿತಾ ರಾವ್
ಬ್ಯಾನ್ಬರಿ
ಯುನೈಟೆಡ್ ಕಿಂಗ್ಡಮ್